ಚಾಲಕ ಸೇರಿ ನಾಲ್ಕು ಜನ ಸಾವು
ಲಿಂಗಸುಗೂರು : ಮಂತ್ರಾಲಯದಿಂದ ಕೊಪ್ಪಳ ಜಿಲ್ಲೆಯ ಆನೆಗುಂದಿ ಬಳಿ ನವಬೃಂದಾವನದಲ್ಲಿ ನಡೆಯುವ ಆರಾಧನಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕ್ರೂಷರ್ ವಾಹನ ಪಲ್ಟಿಯಾದ (accident )ಪರಿಣಾಮ ಚಾಲಕ ಹಾಗೂ ಮೂರು ಜನ ಸಂಸ್ಕೃತ ವಿದ್ಯಾರ್ಥಿಗಳು ಮೃತಪಟ್ಟು, 10 ಜನರಿಗೆ ಗಾಯವಾದ ಘಟನೆ ಸಿಂಧನೂರು ಪಟ್ಟಣದಲ್ಲಿ ಸಂಭವಿಸಿದೆ.
ಮಂತ್ರಾಲಯದ ಗುರು ಸಾರ್ವಭೌಮ ಸಂಸ್ಕೃತ ವಿಧ್ಯಾಪೀಠದಲ್ಲಿ ಸಂಸ್ಕೃತ ವಿದ್ಯಾರ್ಥಿಗಳಾದ ಹಯವದನ(18), ಸುಜಯೇಂದ್ರ(22), ಅಭಿಲಾಷ(20) ಸೇರಿ ಕ್ರೂಷರ್ ಚಾಲಕ ಶಿವಾ(24) ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಆನೆಗುಂದಿ ಬಳಿ ನವಬೃಂದಾವನದಲ್ಲಿ ಮಂತ್ರಾಲಯ ರಾಂಘವೇಂದ್ರಸ್ವಾಮಿಗಳ ಮಠದಿಂದ ನಡೆಯುತ್ತಿರುವ ನರಹರಿ ತೀರ್ಥರ ಆರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂತ್ರಾಲಯದಿಂದ ತೆರಳುತ್ತಿದ್ದ ವೇಳೆ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಹತ್ತಿರ ಕ್ರೂಷರ್ ವಾಹನದ ಚಾಲಕ ಅತಿವೇಗದಿಂದ ವಾಹನ ಚಾಲನೆ ಮಾಡಿದ್ದರಿಂದ ನಿಯಂತ್ರಣ ತಪ್ಪಿ (accident )ಪಲ್ಟಿಯಾಗಿದ್ದು ಇದರಿಂದ ಮಂತ್ರಾಲಯದ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಮೂರು ಜನ ಸಂಸ್ಕೃತ ವಿದ್ಯಾರ್ಥಿಗಳು, ವಾಹನದ ಚಾಲಕ ಮೃತಪಟ್ಟಿದ್ದಾರೆ.

ಹತ್ತ ಜನರಿಗೆ ಗಂಭೀರ ಗಾಯ :
ಕ್ರೂಷರ್ ವಾಹನ ಪಲ್ಟಿಯಾಗಿದ್ದರಿಂದ ಶ್ರೀಹರಿ, ವಿಜಯೇಂದ್ರ, ರಾಘವೇಂದ್ರ, ಬಸವಂತ ಶರ್ಮಾ, ಜಯಸಿಂಹ, ರಾಘವೇಂದ್ರ ಶ್ರೀಕರ ಗಾಯಗೊಂಡಿದ್ದರಿಂದ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭವಿಷ್ಯದ ಕನಸು ಭಗ್ನ :
ಮಂತ್ರಾಲಯದ ಗುರುಸಾರ್ವಭೌಮ ವಿದ್ಯಾಪೀಠದಲ್ಲಿ ಸಂಸ್ಕೃತ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯದ ಬಗ್ಗೆ ಸುಂದರ ಕನಸು ಕಂಡಿದ್ದ ಪಾಲಕರಿಗೆ ತಮ್ಮ ಮಕ್ಕಳು ಅಪಘಾತದಲ್ಲಿ ಸಾವುಪ್ಪಿದ್ದು ಸಿಡಿಲು ಬಡಿದಂತಾಗಿದೆ. ಆರಾಧನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದವರನ್ನು ಜವರಾಯ ತನ್ನತ್ತ ಸೆಳೆದುಕೊಂಡಿದ್ದಾನೆ.
ಮಂತ್ರಾಲಯ ಶ್ರೀಗಳ ಕಂಬನಿ :
ಮಂತ್ರಾಲಯದಿಂದ ಆನೆಗುಂದಿಗೆ ತೆರಳುತ್ತಿದ್ದ ವೇಳೆ ವಾಹನ ಪಲ್ಟಿಯಾಗಿ ಸಂಸ್ಕೃತ ವಿದ್ಯಾಪೀಠದ ಮೂರು ಜನ ವಿದ್ಯಾರ್ಥಿಗಳು ಹಾಗೂ ಚಾಲಕ ಮೃತಪಟ್ಟಿರುವ ಘಟನೆ ಬಗ್ಗೆ ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ತೀವೃ ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಗುರುರಾಯರು ಶಾಂತಿ ನೀಡಲಿ, ದುಖಃ ಸಹಿಸಿಕೊಳ್ಳುವ ಶಕ್ತಿ ಕುಟಂಬದವರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.