76ನೇ ಗಣರಾಜ್ಯೋತ್ಸವದ ಸಂಭ್ರಮ
ಲಿಂಗಸುಗೂರು: ಸಂವಿಧಾನ ನಮಗೆ ನೀಡಿರುವ ಮೂಲಭೂತ ಕರ್ತವ್ಯಗಳನ್ನು ನಾವುಗಳು ಕಟ್ಟುನಿಟ್ಟಿನಿಂದ ಪಾಲಿಸಿದರೆ ದೇಶದ ಪ್ರಗತಿ ಸಾಧ್ಯವೆಂದು ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ ಹೇಳಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ದಿನಾಚರಣೆ (Republic Day )ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ನಮಗೆ ಮೂಲಭೂತ ಹಕ್ಕುಗಳನ್ನು ನೀಡಿದೆ ಅದರ ಜೊತೆ ಕರ್ತವ್ಯಗಳನ್ನು ನೀಡಿದೆ. ಪ್ರತಿಯೊಬ್ಬ ಮಾನವ ಬೆಳೆವಣಿಗೆ ಮೂಲಭೂತ ಹಕ್ಕುಗಳು ಸಹಕಾರಿಯಾಗಿವೆ. ಮೂಲಭೂತ ಹಕ್ಕುಗಳು ನಮಗೆ ಎಷ್ಟು ಪ್ರಾಮುಖ್ಯತೆಯೋ ಕರ್ತವ್ಯಗಳು ಅಷ್ಟೇ ಪ್ರಾಮುಖ್ಯತೆಯಾಗಿದೆ ಎಂದರು.
ದೇಶದ ಐಕ್ಯತೆ, ಸಾರ್ವಭೌಮತೆ, ಅಖಂಡತೆ ಎತ್ತಿ ಹಿಡಿಯುವುದು, ಸಂವಿಧಾನಕ್ಕೆ ಬದ್ಧವಾಗಿರುಬೇಕು, ಸಮಾನತೆ ಮನೋಭಾವ ಬೆಳೆಸಿಕೊಂಡು, ರಾಷ್ಟ್ರೀಯ ಸಂಪತ್ತು ಸಂರಕ್ಷಿಸುವ ಮೂಲಭೂತ ಕರ್ತವ್ಯಗಳನ್ನು ನಾವೆಲ್ಲರೂ ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ದೇಶ ಉತ್ತುಂಗ ಸ್ಥಾನಕ್ಕೇರುತ್ತಿದೆ ಎಂದರು.

ಸಂವಿಧಾನದಿಂದಲೇ ದೇಶ ಅಭಿವೃದ್ಧಿ
ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರೂಪಿಸದಿದ್ದರೆ ಇಂದು ಗಣರಾಜ್ಯೋತ್ಸವ ಆಚರಣೆ ಮಾಡಲು ಅಸಾಧ್ಯವಾಗುತ್ತಿತ್ತು. ದೊಡ್ಡ ಲಿಖಿತ ಸಂವಿಧಾನ ಭಾರತದ ಸಂವಿಧಾನವಾಗಿದೆ. ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಂಡಿರುವ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ವಿವಿಧ ರಾಷ್ಟ್ರಗಳು ಭಾರತ ನೋಡುವ ದೃಷ್ಠಿಯೇ ಬದಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ದೇಶ ಅಭಿವೃದ್ಧಿಯಿಂದ ಮುನ್ನಡೆಯುತ್ತಿದೆ. ಕ್ಷೇತ್ರದಲ್ಲಿ ನಂದವಾಡಗಿ ಯೋಜನೆ ಜಾರಿಗೆ ತಂದಿದ್ದೇನೆ. ಇನ್ನೂ 35 ಹಳ್ಳಿಗಳಿಗೆ ನೀರಾವರಿ ಯೋಜನೆ ಜಾರಿಗೆ ತರಬೇಕಾಗಿದೆ ಆದರೆ ಈಗಿನ ಸರಕಾರದಲ್ಲಿ ಅನುದಾನದ ಕೊರತೆ ಇದೆ ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ತಾಲೂಕ ಆಡಳಿತದಿಂದ ಸನ್ಮಾನಿಸಲಾಯಿತು.
ಈ ವೇಳೆ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇಹೆಸರೂರು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್, ತಹಶೀಲ್ದಾರ ಶಂಶಾಲಂ, ತಾ.ಪಂ ಇಒ ಉಮೇಶ, ಬಿಇಒ ಹುಂಬಣ್ಣ ರಾಠೋಡ್ ಸೇರಿದಂತೆ ಇನ್ನಿತರಿದ್ದರು.
ವಿವಿಧಡೆ ಗಣರಾಜ್ಯೋತ್ಸವ ಆಚರಣೆ :
ಪಟ್ಟಣದ ಜೆಎಂಎಫ್ಸಿ ನ್ಯಾಯಲಯದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶೆ ಉಂಡಿ ಮಂಜುಳಾ ದ್ವಜಾರೋಹಣ ನೆರವೇರಿಸಿದರು. ಈ ವೇಳೆ ಪ್ರಧಾನ ನ್ಯಾಯಾಧೀಶ ಕೆ.ಅಂಬಣ್ಣ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್ ಸೇರಿದಂತೆ ಅನೇಕರಿದ್ದರು. ಓಂಕಾರ ಕಟ್ಟದ ಕಾರ್ಮಿಕರ ಸಂಘದಲ್ಲಿ ಸಂಘದ ಅಧ್ಯಕ್ಷ ಗೋವಿಂದರಾಜ ಬಂಡಿ, ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಕಾರ್ಮಿಕ ಸಂಘದ ಮುಖಂಡರಾದ ಯಲ್ಲಪ್ಪ ಗೋರೆಬಾಳ, ರಾಜಪ್ಪ ಭೋವಿ, ಗೋವಿಂದ ಬಂಡಿ, ಹನುಮಂತ, ಶರಣಪ್ಪ ನಾಯಕ, ಬಾಬಣ್ಣ ಹಾಗೂ ಇನ್ನಿತರಿದ್ದರು.

ಈಚನಾಳ ತಾಂಡಾ ಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ :
ತಾಲೂಕಿನ ಈಚನಾಳ ತಾಂಡ ಸ.ಹಿ.ಪ್ರಾ.ಶಾಲೆಯಲ್ಲಿ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಅತ್ಯಂತ ಸಂಭ್ರಮದಿಂದ ಜರುಗಿತು. ಮಕ್ಕಳು ಊರಲ್ಲಿ ಘೋಷಣೆ ಕೂಗುತ್ತ ಪ್ರಭಾತ್ ಪೇರಿ ಸಾಗಿ ರಾಷ್ಟ್ರೀಯ ಹಬ್ಬದ ವಾತಾವರಣ ಮೂಡಿಸಿದರು. ನಂತರ ಜರುಗಿದ ಕಾರ್ಯಕ್ರಮದಲ್ಲಿ ಶಾಲೆಯ ಭೂ ದಾನಿಗಳಾದ ನಾರಾಯಣಪ್ಪ ನಾಯ್ಕ್ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಫಲವಾಗಿಯೇ ಇಂದು ನಾವೆಲ್ಲ ಶಿಕ್ಷಣ ಪಡೆದು ಘನತೆಯ ಬದುಕು ಸಾಗಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಹಿರಿಯರಾದ ನಾಗರೆಡ್ಡಿ ರಾಠೋಡ್, ಭೀಮಪ್ಪ ತೋಟಗಾರಿಕೆ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಭೀಮಪ್ಪ ರಾಠೋಡ್, ಗಿರಿಯಪ್ಪ ಉಪಾಧ್ಯಕ್ಷ ಶಿವಮ್ಮ ಅಮರೇಶ ಚೌವಾಣ್, ಗ್ರಾಮ ಪಂಚಾಯತಿ ಸದಸ್ಯ ಮೋತಿಲಾಲ್ ಮತ್ತು ಊರಿನ ಹಿರಿಯರು, ಗಣ್ಯರು, ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು, ಅಂಗನವಾಡಿ ಶಿಕ್ಷಕಿಯರಯ ಮುದ್ದು ಮಕ್ಕಳು ಮತ್ತು ಪಾಲಕರು ಭಾಗವಹಿಸಿದ್ದರು.